ಗೋಡೆಯವರಿಗೆ ಚಿಟ್ಟಾಣಿ, ಅಂಬಾತನಯರಿಗೆ ಟಿ.ವಿ. ರಾವ್ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 3 , 2014
|
ನವ೦ಬರ್ 3, 2014
|
ಗೋಡೆಯವರಿಗೆ ಚಿಟ್ಟಾಣಿ, ಅಂಬಾತನಯರಿಗೆ ಟಿ.ವಿ. ರಾವ್ ಪ್ರಶಸ್ತಿ ಪ್ರದಾನ
ಉಡುಪಿ :
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಚಿಟ್ಟಾಣಿ ಯಕ್ಷಗಾನ ಸಪ್ತಾಹದ 7ನೇ ಸರಣಿಯ ಕಾರ್ಯಕ್ರಮಕ್ಕೆ ಭಾನುವಾರ ತೆರೆಬಿತ್ತು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಹಾಗೂ ಟಿ.ವಿ.ರಾವ್ ಪ್ರಶಸ್ತಿಯನ್ನು ಹಿರಿಯ ಅರ್ಥಧಾರಿ ಅಂಬಾತನಯ ಮುದ್ರಾಡಿಯವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಪರ್ಯಾಯ ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, 81ರ ವಯಸ್ಸಲ್ಲೂ ಮತ್ತೆ ಗೆಜ್ಜೆಕಟ್ಟಿ ರಂಗಸ್ಥಳದಲ್ಲಿ ಕುಣಿಯಬೇಕು ಎನ್ನುವ ಚಿಟ್ಟಾಣಿ ಅವರ ಹಂಬಲ, ಉತ್ಸಾಹ, ಶೃದ್ಧೆ ಬೇರೆ ಯಾವ ಕಲಾವಿದರಲ್ಲೂ ಕಾಣಲು ಸಾಧ್ಯವಿಲ್ಲ. ಅವರನ್ನು ನ.9ರಂದು ಸನ್ಮಾನಿಸಲಾಗುವುದು ಎಂದರು.
ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ ಅಪಾರ ಯಕ್ಷಗಾನ ಪ್ರೇಮಿಗಳನ್ನು ಹೊಂದಿರುವ ಚಿಟ್ಟಾಣಿ ಅವರು ಅರ್ಧ ಶತಮಾನ ರಂಗಸ್ಥಳದಲ್ಲಿ ಕುಣಿಯುವಂತಾಗಲಿ ಎಂದರು.
ಚಿಟ್ಟಾಣಿ ಪ್ರಶಸ್ತಿ ಸ್ವೀಕರಿಸಿ ಗೋಡೆ ನಾರಾಯಣ ಹೆಗಡೆ ಮಾತನಾಡಿ ಯಕ್ಷಗಾನವನ್ನು ಉಳಿಸಿ ಬೆಳೆಸಿದ ಕೀರ್ತಿ ಅವಿಭಜಿತ ದ.ಕ.ಜಿಲ್ಲೆಯ ಜನತೆಗೆ ಸಲ್ಲಬೇಕು. 60 ವರ್ಷಗಳ ಹಿಂದೆ ಯಕ್ಷಗಾನ ಕಲಾವಿದರುಗಳನ್ನು ಮನೆಹಾಳರು, ಪೋಲಿಗಳೆಂದೆಲ್ಲಾ ಕುತ್ಸಿತವಾಗಿ ಸಮಾಜ ಕರೆಯುತ್ತಿತ್ತು. ಆದರೆ ಇಂದು ಯಕ್ಷಗಾನ ಕಲಾವಿದರಿಗೆ ಅಪಾರ ಪ್ರೇಮಿಗಳಿರುವುದು ಹೆಮ್ಮೆಯ ಸಂಗತಿ ಎಂದರು. ಯಕ್ಷಗಾನ ಪ್ರೇಮಿ ಟಿ.ವಿ.ರಾವ್ ಪ್ರಶಸ್ತಿ ಸ್ವೀಕರಿಸಿದ ಅಂಬಾತನಯ ಮುದ್ರಾಡಿ ಅವರು ಮಾತನಾಡಿ ಕಲೆಯ ಮೂಲಕ ಜನರ ಸಾಮಿಪ್ಯ, ಪ್ರೀತಿ, ಅಭಿಮಾನ ದೊರೆಯುತ್ತದೆ ಎಂದರು.
ಚಿಟ್ಟಾಣಿ ರಾಮಚಂದ್ರ ಹೆಗಡೆ ಮಾತನಾಡಿ, ಕಲಾವಿದನಾಗಿ ತಾನು ಇಷ್ಟೊಂದು ಎತ್ತರ ಬೆಳೆಯಲು ಗೋಡೆ ನಾರಾಯಣ ಹೆಗಡೆ ಅವರಂತಹ ಕಲಾವಿದರುಗಳೇ ಕಾರಣರು. ಈ ಇಳಿ ವಯಸ್ಸಲ್ಲಿ ಮನಸ್ಸಿಗೆ ಉತ್ಸಾಹವಿದ್ದರೂ ದೇಹಕ್ಕೆ ಸಮಾಧಾನವಿಲ್ಲ. ಹಾಗಾಗಿ ಅಭಿಮಾನಿಗಳು ನಿರೀಕ್ಷಿಸುವ ಮನೋರಂಜನೆಯನ್ನು ಕೊಡಲಾರೆನೋ ಎಂಬ ಅಳುಕಿದೆ ಎಂದರು.
ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಟಿ. ಎಸ್. ರಾವ್, ಚಿಟ್ಟಾಣಿ ಅಭಿಮಾನಿ ಬಳಗದ ಗೋಪಿಕೃಷ್ಣ ರಾವ್ ಉಪಸ್ಥಿತರಿದ್ದರು. ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ, ಎಂ.ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
http://www.vijaykarnataka.com
|
|
|